Jagadish Shettar : 2023 ರ ಚುನಾವಣೆಯಲ್ಲಿ ಸೆಂಟ್ರಲ್ ಕ್ಷೇತ್ರದಿಂದಲೇ ಸ್ಪರ್ಧೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ

| Updated: 31 Oct 2022, 12:28 pm

Jagadish Shettar :2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಊಹಾಪೋಹ ಎಂದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸೆಂಟ್ರಲ್ ಕ್ಷೇತ್ರದಿಂದಲೇ ನಾನೇ ಸ್ಪರ್ಧೆ ಮಾಡುವೆ. ಮತ್ತೊಬ್ಬರನ್ನು ಕಣಕ್ಕೆ ಇಳಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

 
jagadish shettar

ಹೈಲೈಟ್ಸ್‌:

  • ಕಳೆದ ಬಾರಿ ಚುನಾವಣೆಯಲ್ಲಿ ಕೂಡಾ ನಾನು ಸ್ಪರ್ಧೆ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು, ನಾನೇ ಸ್ಪರ್ಧಿಸುತ್ತೇನೆ-ಶೆಟ್ಟರ್
  • ಚುನಾವಣೆಯಲ್ಲಿ ನಾನೇ ಸೆಂಟ್ರಲ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ
  • ಹಿಂದಿನ ಸರ್ಕಾರಗಳಲ್ಲಿ ಭ್ರಷ್ಟಾಚಾರ ನಡೆದಿದ್ದರೆ, ಸಿದ್ದರಾಮಯ್ಯ ತಮ್ಮಲ್ಲಿರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ ದೂರು ನೀಡಲಿ.
ಹುಬ್ಬಳ್ಳಿ: ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಸೆಂಟ್ರಲ್ ಕ್ಷೇತ್ರದಿಂದಲೇ ನಾನೇ ಸ್ಪರ್ಧೆ ಮಾಡುವೆ. ಮತ್ತೊಬ್ಬರನ್ನು ಕಣಕ್ಕೆ ಇಳಸುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಕೂಡಾ ನಾನು ಸ್ಪರ್ಧೆ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೇ ನಾನು ರಾಜ್ಯಪಾಲರಾಗಿ ಹೋಗುತ್ತೇನೆಂಬ ಮಾತುಗಳು ಕೇಳಿ ಬಂದಿದ್ದವು. ಅದರಂತೆ ಈಗ ಕೂಡಾ ಕೇಳಿ ಬಂದಿದೆ. ಅವೆಲ್ಲವೂ ಊಹಾಪೋಹಗಳು ಬರುವ ಚುನಾವಣೆಯಲ್ಲಿ ನಾನೇ ಸೆಂಟ್ರಲ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ತಿಳಿಸಿದರು.


Jagadish Shettar | ವಿಧಾನಸಭೆ ಚುನಾವಣೆಗೂ ಮುನ್ನ ಸಂಪುಟಕ್ಕೆ ಸರ್ಜರಿ?: ಜಗದೀಶ್‌ ಶೆಟ್ಟರ್‌ ಹೇಳಿದ್ದೇನು?

ಭ್ರಷ್ಟಾಚಾರ ಕುರಿತಂತೆ ಹಿಂದೆ ಆಡಳಿತ ನಡೆಸಿದ ಸರ್ಕಾರಗಳ ತನಿಖೆಗೆ ಆಗ್ರಹಿಸಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಭ್ರಷ್ಟಾಚಾರ ತನಿಖೆ ಕುರಿತು ಲೋಕಾಯುಕ್ತದಲ್ಲಿ ದೂರು ಸಲ್ಲಿಕೆ ಆಗಿದೆ. ಅದರೊಟ್ಟಿಗೆ ಈ ಹಿಂದಿನ ಸರ್ಕಾರಗಳಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆಯಾಗಲಿ‌. ಅಲ್ಲದೇ ಸಿದ್ದರಾಮಯ್ಯ ತಮ್ಮಲ್ಲಿರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ ದೂರು ನೀಡಲಿ. ಅದು ಬಿಟ್ಟು ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಪತ್ರ ಬರೆದಿರುವ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಅನುದಾನ ಸಿಗಲಿದೆ ಎಂದು ತಿಳಿಸಿದರು.

ಸ್ಥಳೀಯ ಬಿಜೆಪಿ ಮುಖಂಡರಿಂದ ಶೆಟ್ಟರ್ ನಿರ್ಲಕ್ಷ್ಯ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಕಡೆಗಣಿಸುವ ಕಾರ್ಯ ಮುಂದುವರಿದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಭಾನುವಾರ ನಡೆದ ಸರ್ಕಾರಿ ಶಾಲೆಗಳಿಗೆ ಹೊಸ ‘ಬಣ್ಣದರ್ಪಣೆ’ ಕಾರ್ಯಕ್ರಮದಲ್ಲಿ ಸಹ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರಿಗೆ ಬ್ಯಾನರ್ ನಲ್ಲಿ, ವೇದಿಕೆಯ ನಾಮಪಲಕದಲ್ಲಿ ಕೊಕ್ ಕೊಡಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಮಾತ್ರ ನಾಮ ಕಾ ವಾಸ್ತೇ ಎಂಬಂತೆ ಹೆಸರು ಮುದ್ರಣ ಮಾಡಲಾಗಿದೆ ಎಂದು ಶೆಟ್ಟರ್ ಅವರ ಬೆಂಬಲಿಗರು ಆರೋಪಿಸಿದ್ದಾರೆ.

ಇತ್ತೀಚೆಗೆ, ಹುಬ್ಬಳ್ಳಿ ನಗರಕ್ಕೆ ಪೌರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದ ದ್ರೌಪದಿ ಮುರ್ಮು ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರ ಹೆಸರನ್ನು ಕೈ ಬಿಡಲಾಗಿತ್ತು. ನಂತರ ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಆರೋಪ ಪ್ರತ್ಯಾರೋಪ ಕೇಳಿ ಬಂದ ನಂತರ ಶಿಷ್ಟಾಚಾರ ಪ್ರಕಾರ ಜಗದೀಶ್ ಶೆಟ್ಟರ್ ಹೆಸರನ್ನು ಸೇರ್ಪಡೆ ಮಾಡಿ ವೇದಿಕೆಯಲ್ಲಿ ಸ್ಥಾನಮಾನ ನೀಡಲಾಯಿತು.

ರೈಲ್ವೇ ಕಟ್ಟಡ ಉದ್ಘಾಟಣಾ ಆಮಂತ್ರಣದಲ್ಲಿ ಹೆಸರಿಲ್ಲ!
ಧಾರವಾಡ ನಗರದ ನೂತನ ರೈಲ್ವೆ ನಿಲ್ದಾಣದ ಕಟ್ಟಡ ಉದ್ಘಾಟನೆ ಮಾಡಲು ಕೇಂದ್ರ ರೈಲ್ವೆ ಸಚಿವರು ಧಾರವಾಡಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆಗಳಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೆಸರು ಕೈಬಿಡಲಾಗಿತ್ತು. ಇದರಿಂದ ಪ್ರಭಾವಿ ನಾಯಕನನ್ನು ಸೈಡ್ ಲೈನ್ ಮಾಡಲಾಗ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು.


ಸಿಎಂ-ಮಾಜಿ ಸಿಎಂ ನಡುವೆ ಶೀಥಲ ಸಮರ?
ಇನ್ನು, ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನವನ್ನು ಜಗದೀಶ್ ಶೆಟ್ಟರ್ ನಿರಾಕರಿಸಿದ್ದರು. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ನಡುವೆ ಶೀತಲ ಸಮರ ಆರಂಭವಾಗಿದೆ ಆದ್ದರಿಂದ ಈ ರೀತಿ ಆಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದೇ ರೀತಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಆಕರ್ಷಕವಾಗಿ ಅಭಿವೃದ್ಧಿಗೊಂಡಿರುವ ಕೆರೆ ಉದ್ಘಾಟನೆಗೆ ಸಿದ್ಧವಾಗಿದ್ದು, ಪ್ರವೇಶ ದ್ವಾರದಲ್ಲಿ ಇತ್ತೀಚೆಗೆ ಅಳವಡಿಸಿರುವ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಫ್ಲೆಕ್ಸ್‌ ನಲ್ಲೂ ಶೆಟ್ಟರ್ ಹೆಸರು ಉಲ್ಲೇಖವಾಗಿರಲಿಲ್ಲ.